ಕಾರವಾರ: ಕಾನೂನು ಬಾಹಿರವಾಗಿ ಅರಣ್ಯ ಸಿಬ್ಬಂದಿಗಳು ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವ ಪ್ರಕ್ರೀಯೆಗೆ ಪೋಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಆದೇಶವಿಲ್ಲದೆ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಪೊಲೀಸ್ ರಕ್ಷಣೆ ನೀಡದಂತೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.
ಅರಣ್ಯ ಇಲಾಖೆಯ ಪೋಲೀಸರಿಗೆ ತಪ್ಪು ಮಾಹಿತಿ ನೀಡಿ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸಲು ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತಿದ್ದಾರೆ. ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಒಕ್ಕಲೆಬ್ಬಿಸುವ ಆದೇಶ ನೀಡಬೇಕು. ಆದರೆ ಅರಣ್ಯ ಇಲಾಖೆ ತಪ್ಪು ಮಾಹಿತಿ ನೀಡಿ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಲ್ಲದೆ ಇದರಿಂದ ಅಮಾಯಕ ಅರಣ್ಯವಾಸಿಗಳ ಮೇಲೆ ಕಾನೂನು ಕ್ರಮ ಜರುಗುತ್ತಿದೆ. ಆದರೆ ಅರಣ್ಯವಾಸಿಗಳು ಅರಣ್ಯ ಸಿಬ್ಬಂದಿಗಳು ನಡೆಸುವ ದಬ್ಬಾಳಿಕೆ ಬಗ್ಗೆ ದೂರು ದಾಖಲಿಸಿದರು ಯಾವುದೇ ಮಾನ್ಯತೆ ಸಿಗುತ್ತಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಅರಣ್ಯವಾಸಿಗಳನ್ನು ಬಲಪ್ರಯೋಗದಿಂದ ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಪ್ರಕ್ರಿಯೆಗೆ ಪೊಲೀಸ್ ಸಿಬ್ಬಂದಿ ನೀಡುವುದಕ್ಕೆ ಆಕ್ಷೇಪ ಇದ್ದು, ಇಂತಹ ಪ್ರಕರಣಗಳಿಗೆ ಪೊಲೀಸ್ ರಕ್ಷಣೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ.