ಕಾರವಾರ: ಕಬ್ಬು ಬೆಳೆಗಾರರು ಎಷ್ಟೇ ಪತ್ರ ಬರೆದರೂ, ಪ್ರತಿಭಟನೆ ನಡೆಸಿದರೂ ಜಿಲ್ಲಾಧಿಕಾರಿಗಳು ಒಮ್ಮೆನೂ ಬೆಳೆಗಾರರನ್ನ ಭೇಟಿಯಾಗಿ ಚರ್ಚೆ ನಡೆಸಿಲ್ಲ. ಈ ರೀತಿಯ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಮತ್ತೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಬೊಬಾಟೆ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಈ ಹಿಂದೆ ಕಬ್ಬು ಬೆಳಗಾರರ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿಗೆ ಸಾಕಷ್ಟು ಪತ್ರ ಬರೆದಿದ್ದೇವೆ. ಆದರೂ ಅವರಿಂದ ಒಂದಕ್ಕೂ ಉತ್ತರ ಸಿಗಲಿಲ್ಲ. ಸಧ್ಯ ಸ್ಥಳೀಯವಾಗಿರುವ ಕಬ್ಬು ಕಟಾವು ತಾಂಡಾಗಳಿಗೆ ಸಕ್ಕರೆ ಕಾರ್ಖಾನೆಯು ಅವಕಾಶ ನೀಡುತ್ತಿಲ್ಲ. ಜಿಲ್ಲಾಧಿಕಾರಿಯು ಸ್ಥಳಕ್ಕೆ ಬಂದು ಬೆಳೆಗಾರರ ಸಮಸ್ಯೆಗಳನ್ನ ಕೇಳಿಲ್ಲ. ಹಳಿಯಾಳದಲ್ಲಿ 53, ಧಾರವಾಡದಲ್ಲಿ 9 ದಿನ, 39 ದಿನ ಬೆಂಗಳೂರಿನಲ್ಲಿ ಹೋರಾಟ ಮಾಡಿದ್ದೇವೆ. ನಮ್ಮ ಹೋರಾಟಕ್ಕೆ ರಾಜಕಾರಣಿಗಳು ಕೂಡ ಆರಾಮಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಹೋರಾಟದಿಂದ ರಾಜ್ಯದ ರೈತರಿಗೆ 950 ಕೋಟಿ ರೂ. ಲಾಭವಾಗಿದೆ ಎಂದರು.
ಹಳಿಯಾಳ ಇಐಡಿ ಫ್ಯಾಕ್ಟರಿ ರಾಜ್ಯದಲ್ಲೇ ಅತಿ ಕಡಿಮೆ ಬೆಲೆ ನೀಡಿ ಕಬ್ಬು ಖರೀದಿಸುತ್ತಿದೆ. ಈ ಬಗ್ಗೆ ಪತ್ರ ಬರೆದರೂ ಜಿಲ್ಲಾಧಿಕಾರಿಗಳು ಒಂದು ದಿನವೂ ಸಭೆ ನಡೆಸುವ ಬಗ್ಗೆ ಮಾತನಾಡುತ್ತಿಲ್ಲ. ಹೀಗೆ ಕಬ್ಬು ಬೆಳೆಗಾರರಿಗೆ ಸ್ಪಂದಿಸದಿದ್ದರೆ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಘುತ್ತದೆ. ಹೀಗಾಗಿ ರೈತರು, ಕಾರ್ಖಾನೆ ಹಾಗೂ ನಮ್ಮ ಸಂಘದವರೊಂದಿಗೆ ಶೀಘ್ರವೇ ಜಿಲ್ಲಾಧಿಕಾರಿಗಳು ಸಭೆ ನಡೆಸಬೇಕು ಎಂದು ಆಗ್ರಹಿಸಿದರು.
ನಾವು ಧರಣಿ ನಡೆಸಿದಾಗ ಸಕ್ಕರೆ ಆಯುಕ್ತರು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದರು. ಸಕ್ಕರೆ ಕಾರ್ಖಾನೆಯು ರೈತರಿಂದ ಹೆಚ್ಚು ಸಾಗಾಣಿಕಾ ವೆಚ್ಚ ಪಡೆಯುತ್ತಿರುವ ಬಗ್ಗೆ ಮಾತನಾಡಿ,. ಬಾಕಿ ಮೊತ್ತವನ್ನು ಬೆಳೆಗಾರರಿಗೆ ಹಿಂತಿರುಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಈವರೆಗೆ ಯಾವುದೇ ತನಿಖೆ ಆಗಿಲ್ಲ. ಮೋಸದಿಂದ ಪಡೆದ ಹಣವನ್ನ ಕೂಡಲೇ ರೈತರಿಗೆ ಹಿಂತಿರುಗಿಸಬೇಕು. ಈ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿ ಮುಂದೆ ಅಹೋರಾತ್ರಿ ಧರಣಿ, ಅದಕ್ಕೂ ಎಚ್ಚೆತ್ತುಕೊಳ್ಳದಿದ್ದರೆ ರಸ್ತೆಗಳಲ್ಲೇ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪರಶುರಾಮ ಪಂಚನೋಳಕರ, ಮಂಜುನಾಥ ಗೌಡ, ಪರಶುರಾಮ ಎಳಗೂರಕರ ಇದ್ದರು.