ರಾಜ್ಯ ಸರಕಾರ ಯಶಸ್ವಿನಿ ಯೋಜನೆಯನ್ನು ಮರು ಜಾರಿ ಮಾಡಿದ್ದು, ಜ. 31 ರವರೆಗೂ ನೋಂದಣಿಗೆ ಅವಕಾಶವಿದೆ. ಜನರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ರಿಸೋರ್ಸ್ ಫಾರ್ ಕ್ರಿಯೇಟಿವ್ ಡೆಮಾಕ್ರಸಿ ಸಂಸ್ಥೆಯ ಕೃಷ್ಣಮೂರ್ತಿ ಪನ್ನೆ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ನಾವು ಎರಡು ವರ್ಷದಿಂದಲೂ ಯಶಸ್ವಿನಿ ಯೋಜನೆ ಜಾರಿಗೆ ಸಾಮಾಜಿಕ ಜವಾಬ್ದಾರಿಯಿಂದ ಹೋರಾಡುತ್ತಿದ್ದೆವು. ಸದ್ಯ ಸರಕಾರ ಈ ಯೋಜನೆಯನ್ನು ಮರು ಜಾರಿ ಮಾಡಿದ್ದು, ಸಾರ್ವಜನಿಕರಲ್ಲಿ ಯೋಜನೆಯ ಕುರಿತಾದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಸಹಕಾರಿಗಳು ಈ ಯೋಜನೆಯ ವ್ಯಾಪ್ತಿಗೆ ಬರಬಹುದಾಗಿದೆ. ಈ ಮೊದಲು ರೈತರಿಗೆ ಮಾತ್ರ ಮೀಸಲಿದ್ದ ಈ ಯೋಜನೆಯನ್ನು ಕಟ್ಟಡ ಕಾರ್ಮಿಕರು, ಪೌರಕಾರ್ಮಿಕರು ಸೇರಿದಂತೆ ಎಲ್ಲರೂ ಈಗ ಫಲಾನುಭವಿಗಳಾಗಬಹುದು. ಹಳೆಯ ನ್ಯೂನತೆಗಳನ್ನು ತಿದ್ದಿ ಹೊಸದಾಗಿ ಯೋಜನೆಯನ್ನು ಮರು ಜಾರಿಗೊಳಿಸಲಾಗಿದೆ.
ಇನ್ನೂ ಕೆಲ ನ್ಯೂನ್ಯತೆಗಳನ್ನು ಸರಕಾರ ಮುಂದಿನ ದಿನಗಳಲ್ಲಿ ಸರಿಪಡಿಸುವ ವಿಶ್ವಾಸವಿದೆ. ಸರಕಾರ ಖಾಸಗಿ ಆಸ್ಪತ್ರೆಗಳಿಗೆ ನಿಗದಿತ ಕಾಲಮಿತಿಯಲ್ಲಿ ಹಣವನ್ನ ಬಿಡುಗಡೆ ಮಾಡಬೇಕು. ಖಾಸಗಿ ಆಸ್ಪತ್ರೆಗಳು ಕೂಡ ಯಾವುದೇ ಸಂದರ್ಭದಲ್ಲೂ ಯಶಸ್ವಿನಿ ಫಲಾನುಭವಿಗಳಿಗೆ ಉತ್ತಮ ಸೇವೆ ನೀಡಬೇಕಿದೆ. ಶಾಶ್ವತವಾಗಿ, ಸುಸ್ಥಿರವಾಗಿ ಈ ಯೋಜನೆ ಮುಂದುವರಿಯಲು ಎಲ್ಲರ ಸಹಕಾರವೂ ಅಗತ್ಯವಿದೆ ಎಂದರು.
ವಸತ ಬಾಂದೇಕರ್, ವಿನಾಯಕ, ನಾಗೇಶ ಮಹಾಲೆ, ಗಣಪತಿ ಇದ್ದರು.