ಕಾರವಾರ: ಜಿಲ್ಲೆಯ ಸಾರ್ವಜನಿಕ ಮತ್ತು ಸರಕಾರಿ ಕಾಮಗಾರಿಗಳಿಗೆ ನದಿ ಮರಳಿಗೆ ಪರ್ಯಾಯವಾಗಿ ಎಂಸ್ಯಾಂಡ್ ಬಳಸಲು ಸಾರ್ವಜನಿಕರಿಗೆ ರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಇಲ್ಲೆಯ ಕ್ರಶರ್ಗಳಲ್ಲಿ ಎಂಸ್ಯಾಂಡ್ ಉತ್ಪಾದನೆ ಹೆಚ್ಚಿಸಲು ಉತ್ತೇಜನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.
ಚೆನೈನ ಹಸಿರು ಪೀಠದ ಆದೇಶದಂತೆ ಸಿಆರ್ಝೆಡ್ ಅವಲಯದ ಮರಳನ್ನು ತೆರವುಗೊಳಿಸುವುದು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮರಳಿನ ತೆರವಿಗಾಗಿ ಸಲ್ಲಿಸಿದ್ದ ಪ್ರಸ್ತಾವನೆಯು ಸರಕಾರದ ಹಂತದಲ್ಲಿದೆ. ಹೀಗಾಗಿ 2020ರ ಹೊಸ ಮರಳು ನೀತಯ ಅನುಸಾರ ಜಿಲ್ಲೆಯ ಅಣೆಕಟ್ಟು ಹಾಗೂ ಜಲಾಶಯ ಮತ್ತು ಅದರ ಹಿನ್ನೀರಿನಲ್ಲಿ ದೊರೆಯುವ ಮರಳನ್ನು ತೆರವುಗೊಳಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಬಗ್ಗೆ ಕೆಪಿಸಿಎಲ್ ಅವರಿಂದ ಮಾಹಿತಿ ಪಡೆದು ಜಿಲ್ಲಾಡಳಿತಕ್ಕೆ ನೀಡುವಂತೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಪರಿಶೀಲನೆ ಕೈಗೊಂಡು ಹೂಳು ತೆರವುಗೊಳಿಸುವ ವಿಷಯದ ಬಗ್ಗೆ ಪರಿಶೀಲನೆ ನಡೆಸಿ ವರದಿ ನಿಡುವಂತೆ ಸೂಚಿಸಿರು.
ಜಿಲ್ಲೆಯ ಸಿಆರ್ಝೆಡ್ ವ್ಯಾಪ್ತಿಯಲ್ಲಿಲ್ಲದ ಹಳಿಯಾಳ, ಯಲ್ಲಾಪುರ, ಶಿರಸಿ, ಸಿದ್ದಾಪುರ ತಾಲೂಕಿನ ಕೆರೆ, ಹಳ್ಳ, ಕೊಳ್ಳಗಳಲ್ಲಿ ದೊರೆಯಬಹುದಾದ ಮರಳು ನಿಕ್ಷೇಪಗಳನ್ನು ಗುರುತಿಸಬೇಕು. ಬಳಿಕ ಸಂಬಂಧಿಸಿದ ಪಂಚಾಯಿತಿಯ ಪಿಡಿಒಗಳಿಂದ ಮಾಹಿತಿ ಪಡೆದು ಮರಳಿನ ವಿಲೇವಾರಿಗೆ ಕ್ರಮ ವಹಿಸಬೇಕು. ಜತೆಗೆ ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲೂಕಿನ ನದಿ ಪಾತ್ರದಲ್ಲಿ ದೊರೆಯುವ ಮರಳು ನಿಕ್ಷೇಪಗಳನ್ನು ಗುರುತಿಸಿ ಸೂಕ್ತ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಉಪ ವಿಭಾಗೀಯ ಅಧಿಕಾರಿ ಜಯಲಕ್ಷ್ಮಿ ರಾಯಕೋಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ.ಸಿ. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.