ಕಾರವಾರ:
ಟೊಪೆಲೋ ಯುದ್ಧ ವಿಮಾನವನ್ನು ಕಾರವಾರಕ್ಕೆ ತರುವ ಯೋಜನೆಯ ತಾಂತ್ರಿಕ ಸಮಸ್ಯೆಗಳು ಬಗೆಹರಿದಿದ್ದು ತೆಂಡರ್ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ. ನಾಲ್ಕು ತಿಂಗಳಲ್ಲಿ ಚೆನೈನಿಂದ ಸ್ಥಳಾಂತರಗೊಳಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಅಥುಲ್ ಆನಂದ ಹೇಳಿದರು.
ನಗರದ ಚಪೆಲ್ ವಾರ್ಶಿಪ್ ಮ್ಯೂಸಿಯಂನ ಆವರಣದಲ್ಲಿ ಗುರುವಾರ ನಡೆದ ಟಪೆಲೋ ಮ್ಯೂಸಿಯಂನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಟೊಪೆಲೋ ದೊಡ್ಡ ಯುದ್ಧ ವಿಮಾನವಾಗಿದೆ. ಅದನ್ನು ಚೆನೈನಿಂದ ಕಾರವಾರಕ್ಕೆ ಸಣ್ಣ ಭಾಗಗಳಾಗಿ ವಿಂಗಡಿಸಿ ತರಬೇಕಾಗುತ್ತದೆ. ಈ ವರೆಗೆ ಇದ್ದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿದ್ದೇವೆ ಎಂದರು.
ವಾರ್ಶಿಪ್ ಮ್ಯೂಸಿಯಂ ಇರುವ ಪ್ರದೇಶ ಯುದ್ಧ ನೌಕೆ, ವಿಮಾನ ಶಸ್ತ್ರಾಸ್ತಗಳ ಮ್ಯೂಸಿಯಂ ಆಗಲಿದೆ. ಟೊಪೆಲೋ ಯುದ್ಧ ವಿಮಾನ ತರಲು ನೌಕಾಸೇನೆಯು 4 ಕೋಟಿ ರೂ. ಖರ್ಚು ಮಾಡುತ್ತಿದೆ. ಸದ್ಯ ಟೆಂಡರ್ ಕರೆದಿದ್ದು, ಎರಡು ಅರ್ಜಿಗಳು ಬಂದಿವೆ. ನಾಲ್ಕು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ವಿಮಾನವನ್ನು ಸ್ಥಳಾಂತರಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದರು.
ಕಾರವಾರದ ನೌಕಾನೆಲೆಯಲ್ಲಿ 8 ರಿಂದ 10 ಸಾವಿರ ಜನರಿದ್ದಾರೆ. ಮುಂದಿನ ದಿನಗಳಲ್ಲಿ 15 ರಿಂದ 16 ಸಾವಿರ ಜನರು ಬರಲಿದ್ದಾರೆ. ಇದರಿಂದ ನಮ್ಮ ಎಲ್ಲಾ ಬೇಡಿಕೆಗಳನ್ನು ಕಾರವಾರ ನಗರವೇ ಪೂರೈಸಲಿದೆ. ಆಗ ಕಾರವಾರ ನಗರವೂ ಬೆಳೆಯಲಿದೆ ಎಂದರು. ನೌಕಾ ಸೇನೆ ವಿಮಾನ ನಿಲ್ದಾಣದ ಜತೆಗೆ ನಾಗರೀಕ ವಿಮಾನ ನಿಲ್ದಾಣದ ಕೆಲಸವೂ ನಡೆಯಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಂಕುಸ್ಥಾಪನೆ ಮಾಡಿದರು. ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಾಗು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ದನ ಇದ್ದರು.