ಕಾರವಾರ: ನಗರದ ಅರ್ಜುನ ಥಿಯೇಟರ್ ನಲ್ಲಿ ಪಠಾಣ್ ಸಿನಿಮಾವನ್ನು ಪ್ರದರ್ಶನ ಮಾಡದಂತೆ ಗುರುವಾರ ಪ್ರತಿಭಟನೆ ಮಾಡಿದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಪಾಠಣ್ ಸಿನಿಮಾದ ಬೇಷರಂ ರಂಗ್ ಹಾಡಿನಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ನಂದಕಿಶೋರ್ ನೇತೃತ್ವದಲ್ಲಿ ಸುಮಾರು 20 ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಪಾಠಣ್ ಚಿತ್ರ ಹಾಗೂ ಥಿಯೇಟರ್ ವಿರುದ್ಧ ಘೋಷಣೆ ಕೂಗಿದರು.
ಬುಧವಾರವೇ ನಗರ ಪೊಲೀಸ್ ಠಾಣೆ ಹಾಗೂ ಥಿಯೇಟರ್ ಮಾಲೀಕರಿಗೆ ಪಠಾಣ್ ಚಿತ್ರ ಪ್ರದರ್ಶನ ಮಾಡಿದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಮನವಿ ನೀಡಿದ್ದರು.
ಗುರುವಾರ ಪ್ರತಿಭಟನಾಕಾರರು ಬರುವ ಮೊದಲೇ ಚಿತ್ರಮಂದಿರದ ಸಿಬ್ಬಂದಿ ಪಠಾಣ್ ಚಿತ್ರದ ಪೋಸ್ಟರ್ ಗಳನ್ನು ತೆರವು ಮಾಡಿದ್ದರು. ದರ್ಶನ ಅಭಿನಯದ ಕ್ರಾಂತಿ ಚಿತ್ರದ ಪೋಸ್ಟರ್ ಅಂಟಿಸಿದ್ದರು. ಆದರೂ, ಪಠಾಣ್ ಚಿತ್ರ ಪ್ರದರ್ಶನ ಮಾಡದಂತೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಳಿಕ ಥಿಯೇಟರ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ಪ್ರತಿಭಟನಾಕಾರರು ಮಾಲೀಕನಿಗೆ ಕರೆ ಮಾಡಿ ಪಾಠಣ್ ಚಿತ್ರದ ಪ್ರದರ್ಶನ ನಿಲ್ಲಿಸುವಂತೆ ತಾಕೀತು ಮಾಡಿದರು. ಇದಕ್ಕೆ ಒಪ್ಪದ ಥಿಯೇಟರ್ ಮಾಲೀಕರು ಎಲ್ಲೆಡೆ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಇಲ್ಲಿ ಮಾತ್ರ ಯಾಕೆ ನಿಲ್ಲಿಸಬೇಕು ಎಂದು ಉತ್ತರ ನೀಡುದರು. ಇದಕ್ಕೆ ಕೋಪಗೊಂಡ ಪ್ರತಿಭಟನಾಕರಾರು ಮತ್ತೆ ಕರೆ ಮಾಡಿ ತಮ್ಮ ಬಳಿಯೇ ಮಾತನಾಡಲು ನೀಡುವಂತೆ ಹೇಳಿದರು. ಅದಕ್ಕೂ ಒಪ್ಪದ ಕಾರಣ ಥಿಯೇಟರ್ ಗೆ ಬೀಗ ಹಾಕಲು ಮುಂದಾದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಚತ್ತ ಪೊಲೀಸರು ಪ್ರತಿಭಟನಾಕರರನ್ನು ಬಂದಿಸಿ ಜಿಲ್ಲಾ ಪೊಲೀಸ್ ಪರೇಡ್ ಮೈದಾನಕ್ಕೆ ಕರೆತಂದು ಬಿಡುಗಡೆ ಮಾಡಿದರು.